ಯುಗಪ್ರವರ್ತಕ ನಾವುಡರು
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಒಕ್ಟೋಬರ್ 30 , 2015
|
ಒಕ್ಟೋಬರ್ 30, 2015
|
ಯುಗಪ್ರವರ್ತಕ ನಾವುಡರು
ಯುಗ ಪ್ರವರ್ತಕ ಯಕ್ಷಗಾನ ಭಾಗವತೋತ್ತಮ ರಾಗಿದ್ದ ಕಾಳಿಂಗ ನಾವಡರ ಸಾಧನೆ ಸಿದ್ಧಿಗಳನ್ನು ನಿರೂಪಿ ಸುವ ಅಪೂರ್ವ ರೂಪಕವು ಈಚೆಗೆ ಆಕಾಶವಾಣಿಯಲ್ಲಿ ಪ್ರಸಾರವಾಗಿತ್ತು. ಇದು ಮೂಲತಃ ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ರೂಪಿತವಾದ ಕಾರ್ಯಕ್ರಮ.
ಎಲ್ಲ ರಂಗಗಳಲ್ಲಿಯೂ ಇರುವಂತೆ ಯಕ್ಷಗಾನ ಕಲಾರಂಗದಲ್ಲೂ ಕಲಾವಿದರಲ್ಲಿ ಕೇವಲ "ಕಸಬುದಾರಿ'ಗಳ ಸಂಖ್ಯೆಯೇ ಹೆಚ್ಚು . ಕೆಲವರು ಕಲಾಕ್ಷೇತ್ರಕ್ಕೆ ನ್ಯಾಯ ಒದಗಿಸುವ ಕಲಾವಿದರು. ಇನ್ನು ಕೆಲವೇ ಮಂದಿ ಅಸಾಧಾರಣ ಪ್ರತಿಭಾವಂತ ಕಲಾ ಪಟುಗಳು. ಕಾಳಿಂಗ ನಾವಡರು ಅಂಥ ಅನುಪಮ ತಾರಾಮೌಲ್ಯದ ಭಾಗವತರೇಣ್ಯರು. ಯಕ್ಷಗಾನದ ಆಕಾಶದಲ್ಲಿ ಪ್ರಕಾಶಮಯ ತಾರೆಯಂತೆ ಜಾಜ್ವಲ್ಯಮಾನವಾಗಿ ಬೆಳಗಿ, ನಮ್ಮ ದೌರ್ಭಾಗ್ಯದಿಂದ ಅಕಾಲದಲ್ಲಿ ಅಸ್ತಂಗತರಾಗಿ ಹೋದವರು.
ಇಂಥ "ಯುಗಪ್ರವರ್ತಕ' ಮಹಾನ್ ಕಲಾವಿದರು ಸಹೃದಯ ಜನಮಾನಸದಲ್ಲಿ ಸದಾ ಚಿರಂಜೀವಿಗಳಾಗಿ ಬಾಳತಕ್ಕವರು. ಕಾಳಿಂಗ ನಾವಡರು ಕಣ್ಮರೆಯಾಗಿ ಇಪ್ಪತ್ತು ವರ್ಷಗಳಾದರೂ ಅವರನ್ನು ಯಕ್ಷಗಾನ ಕಲಾವಿದರು, ಕಲಾರಸಿಕರೂ ಮರೆಯುವಂತಿಲ್ಲ.
ನಾವಡರು ಸಾಲಿಗ್ರಾಮ ಮೇಳದಲ್ಲಿ ಭಾಗವತರಾಗಿದ್ದ ಕಾಲದಲ್ಲಿ ಮೇಳದಲ್ಲಿ ಪ್ರದರ್ಶಿಸಲು ಪ್ರಸಂಗವೊಂದನ್ನು ರಚಿಸಿಕೊಡಬೇಕೆಂದು ಮೇಳದ ವತಿಯಿಂದ ನನಗೆ ಕೇಳಿಕೆ ಬಂತು. ಪ್ರಥಮ ಬಾರಿಗೆ ಬಡಗು ಮೇಳಕ್ಕೆ ಪ್ರಸಂಗ ರಚಿಸಿಕೊಡುವ ಸಂದರ್ಭಕ್ಕಾಗಿ ಸಂತೋಷಪಟ್ಟೆ . ನನ್ನ "ಚಾಲುಕ್ಯ ಚಕ್ರೇಶ್ವರ' ಎಂಬ ಚಾರಿತ್ರಿಕ ವಸ್ತುವುಳ್ಳ (ಚಾಲುಕ್ಯ ವಂಶದ ಇಮ್ಮಡಿ ಪುಲಕೇಶಿಯ ಕುರಿತಾದ) ಪ್ರಸಂಗವು ಕಾಳಿಂಗ ನಾವಡರ ಆಕರ್ಷಕ ಭಾಗವತಿಕೆಯಲ್ಲಿ ಪ್ರದರ್ಶನಗೊಂಡಿತು. ಪ್ರದರ್ಶನ ನೋಡಲು ನಾನೂ ಒಮ್ಮೆ ಹೋಗಿದ್ದೆ. ಆಗ ಸಾಲಿಗ್ರಾಮ ಮೇಳದಲ್ಲಿ ಐರೋಡಿ ಗೋವಿಂದಪ್ಪ, ಬೆಳೆಯೂರು ಕೃಷ್ಣಮೂರ್ತಿ ಮೊದಲಾದ ಕಲಾವಿದರಿದ್ದರು.
ಒಮ್ಮೆ ಕಾಳಿಂಗ ನಾವಡರು ಮಾತನಾಡಲು ಸಿಕ್ಕಿದಾಗ ಸಾಂದರ್ಭಿಕವಾಗಿ, ""ಭಾಗವತಿಕೆ ಸಾಕು ಎನ್ನಿಸುತ್ತಿದೆ. ನಿಲ್ಲಿಸಬೇಕೆಂದಿದ್ದೇನೆ'' ಎಂದಿದ್ದರು. ನಾನು ಆತಂಕದಿಂದ, ""ನೀವು ಹಾಗೆ ಹೇಳಬಾರದು. ನಿಮ್ಮನ್ನು ಬಿಟ್ಟುಕೊಡಲು ಅಭಿಮಾನಿಗಳಾದ ನಾವೆಲ್ಲ ಸಿದ್ಧರಿಲ್ಲ'' ಎಂದಿದ್ದೆ. ಅವರು ನಗುತ್ತಾ ""ಇಲ್ಲಪ್ಪಾ, ಸಾಕು!'' ಎಂದು ಒತ್ತಿ ಹೇಳಿದ್ದರು. ನಾನು ಬೇರೆ ವಿಷಯಕ್ಕೆ ಮಾತು ಹೊರಳಿಸಿದ್ದೆ. ಮಹಾ ಪ್ರತಿಭಾವಂತರಲ್ಲಿ ಕೆಲವರ ಮನಃಸ್ಥಿತಿ, ಮಾತು, ವರ್ತನೆ ಹೀಗೆ ವಿಚಿತ್ರವಾಗಿರುತ್ತದೆ. ಇದಕ್ಕೆ ಕಾರಣವನ್ನು ಯಾರು ಹೇಳಬಲ್ಲರು?
ಕೃಪೆ :
udayavani
|
|
|